Total Pageviews

Tuesday, July 20, 2010

'ಮಾಯೆ'ಯ ಎರಡು ನಾಟಕಗಳು ಪುಸ್ತಕ ಯಶಸ್ವಿಯಾಗಿ ಬಿಡುಗಡೆಯಾಯಿತು

ಪ್ರಸಿದ್ಧ ನಾಟಕಕಾರ ಡಿ. ಕೆ. ಚೌಟರ ಎರಡು ತುಳು ನಾಟಕಗಳ ಕನ್ನಡಾನುವಾದದ ಪುಸ್ತಕ 'ಮಾಯೆ'ಯ ಎರಡು ನಾಟಕಗಳು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಜುಲೈ ೧೬ ರಂದು ಯಶಸ್ವಿಯಾಗಿ ಬಿಡುಗಡೆಯಾಯಿತು.


ಸಮಾರಂಭದಲ್ಲಿ ಶ್ರೀಯುತ ಎಂ. ಕೆ. ಭಾಸ್ಕರ್ ರಾವ್, ಶ್ರೀಯುತ ಸುರೇಶ್ ಆನಗಳ್ಳಿ, ನಾಟಕಗಳ ಮೂಲ ಕರ್ತೃ ಶ್ರೀಯುತ ಡಿ. ಕೆ. ಚೌಟ, ಕನ್ನಡ ಅನುವಾದಕರಾದ ಶ್ರೀಯುತ ಕೇಶವ್ ಕುಡ್ಲ, ಹಾಗೂ ರಂಗ ಕರ್ಮಿಗಳಾದ ಶ್ರೀಯುತ ಕೃಷ್ಣಮೂರ್ತಿ ಕವತ್ತಾರ್ ರವರು ಉಪಸ್ಥಿತರಿದ್ದರು. ಪುಸ್ತಕ ಬಿಡುಗಡೆ ಸಮಾರಂಭವು ಈ ಎಲ್ಲ ಗಣ್ಯ ವ್ಯಕ್ತಿಗಳಿಂದ ಯಶಸ್ವಿಯಾಯಿತು.

ಶ್ರೀಯುತ ಎಂ. ಕೆ. ಭಾಸ್ಕರ್ ರಾವ್ ರವರು ಎರಡೂ ನಾಟಕಗಳ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುವ ಮೂಲಕ ಪ್ರವೇಶವನ್ನು ಒದಗಿಸಿದರು. ಸುರೇಶ್ ಆನಗಳ್ಳಿಯವರು ಡಿ. ಕೆ. ಚೌಟರ ಬಗ್ಗೆ ನಾಲ್ಕು ಹಿತನುಡಿಗಳನ್ನಾಡಿದರು. ಅನುವಾದಿಸಲು ಅವಕಾಶ ಕಲ್ಪಿಸಿದ ಡಿ. ಕೆ. ಚೌಟರವರಿಗೆ ತಮ್ಮ ಅಭಿನಂದನೆಗಳನ್ನು ತಿಳಿಸಿ, ತುಳು ಭಾಷೆ ಕಲಿಯುವುದಕ್ಕೂ ಒಂದು ಹೆಜ್ಜೆಯಾಯಿತು ಎಂದು ತಮ್ಮ ಅನುವಾದದ ಅನುಭವಗಳನ್ನು ಕೇಶವ್ ಕುಡ್ಲರವರು ಹಂಚಿಕೊಂಡರು.

ಪುಸ್ತಕ ಬಿಡುಗಡೆ ಸಮಾರಂಭದ ನಂತರ ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದ ರಂಗ ಪ್ರಯೋಗ 'ಉರಿ ಉಷ್ಣದ ಮಾಯೆ' ನಾಟಕ ಪ್ರದರ್ಶನಗೊಂಡಿತು.

ನಾಟಕ ಪ್ರಯೋಗವು ಕನ್ನಡ ಮತ್ತು ತುಳು ರಂಗ ಭೂಮಿಯಲ್ಲಿ ಹೆಸರಾಗಿರುವ ರಂಗ ತಂಡ 'ರಂಗಾವತಾರ'ದಿಂದ ಹೊರಹೊಮ್ಮಿತು.

ಜಾತಿ - ಧರ್ಮ ಮತ್ತು ಬದಲಾದ ಈ ಕಾಲದ ಕಥೆ ಬಗೆಗಿನ ವಿಷಯಗಳು ಈ ನಾಟಕದಲ್ಲಿ ಒಳಗೊಂಡಿದೆ. ಎಲ್ಲರೂ ನೋಡಲೇಬೇಕಾದ ನಾಟಕ "ಉರಿ ಉಷ್ಣದ ಮಾಯೆ"...

Thursday, July 1, 2010

ವೈದ್ಯರ ದಿನಾಚರಣೆ



ಎಲ್ಲರ ಆರೋಗ್ಯ ತಪಾಸಣೆ ಮಾಡಿ ದೈವ ಎನ್ನಿಸಿಕೊಳ್ಳುವವನು ವೈದ್ಯ. ಇಂದು (ಜುಲೈ 1) ವೈದ್ಯರ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ.

ಭಾರತದಲ್ಲಿ ಡಾ. ಭಿದನ್ ಚಂದ್ರ ರಾಯ್ ಅವರ ನೆನಪಿನಲ್ಲಿ ಜುಲೈ ೧ರಂದು ವೈದ್ಯರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈತ ವೈದ್ಯಕೀಯ ರಂಗದಲ್ಲಿ ಅಪಾರವಾದ ಸಾಧನೆ ಮಾಡಿದವರು.

೧೮೮೨ರ ಜುಲೈ ೧ ರಂದು ಇವರ ಜನ್ಮದಿನವಾದರೆ, ೧೯೬೨ರ ಜುಲೈ ೧ ರಂದು ದೈವಾದೀನರಾದರು. ಈತನ ಜನನ ಹಾಗೂ ಮರಣ ಎರಡೂ ಜುಲೈ ೧ ರಂದೇ.

ಏಕ ಕಾಲದಲ್ಲೇ F.R.C.S. (Fellowship of the Royal College of Surgeon) ಹಾಗೂ M.R.C.P. (Member of the Royal College of Physicians) ಎರಡನ್ನೂ ಮುಗಿಸಿದ ಕೆಲವೇ ಮಹನೀಯರಲ್ಲಿ ಇವರೂ ಒಬ್ಬರು.

ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ "ಭಾರತ ರತ್ನ" ಪ್ರಶಸ್ತಿಯನ್ನು ೪ನೇ ಫೆಬ್ರವರಿ ೧೯೬೧ ರಂದು ಕೊಡಮಾಲಾಗಿತ್ತು.

ಇವರು ವೈದ್ಯಕೀಯದಲ್ಲಷ್ಟೇ ಅಲ್ಲದೆ ಇತರ ಸಾಧನೆಗಳೂ ಮಾಡಿದ್ದಾರೆ. ತಮ್ಮ ಜನ್ಮಸ್ಥಳವಾದ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಸಮಾಜ ಸೇವೆಯೂ ಮಾಡಿದ್ದರು. ದೇಶದ ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ ದೇಶಕ್ಕೋಸ್ಕರ ಹೋರಾಡಲೂ ಸೈ ಎಂದಿದ್ದರು.

ರಾಜಕೀಯದಲ್ಲೂ ಡಾ. ಬಿ. ಸಿ. ರಾಯ್ ರವರದು ಮೇಲುಗೈ. ೧೪ ಜನವರಿ ೧೯೪೮ ರಿಂದ ೧ ಜುಲೈ ೧೯೬೨ (ನಿಧನ) ವರೆಗೂ ಪಶ್ಚಿಮ ಬಂಗಾಳದ ಮಾನ್ಯ ಮುಖ್ಯಮಂತ್ರಿಗಳಾಗಿದ್ದರು.

ಇಂತಹ ಒಬ್ಬ ಅತ್ತ್ಯುನ್ನತ ವೈದ್ಯನ ನೆನೆಪಿನಲ್ಲಿ ತನ್ನ ಜನನ ಹಾಗೂ ನಿಧನದ ದಿನವೂ ಆದ ಜುಲೈ ೧ ರಂದು ನಮ್ಮ ದೇಶದೆಲ್ಲೆಡೆ "ವೈದ್ಯರ ದಿನಾಚರಣೆ"ಯನ್ನು ಆಚರಿಸಲಾಗುತ್ತದೆ.

ಎಲ್ಲಾ ವೈದ್ಯರಿಗೂ ಶುಭವಾಗಲಿ
ವೈದ್ಯೋ ನಾರಾಯಣೋ ಹರಿಃ